ಮಿಷನ್ ಮಂಗಲ್ ೨೦೧೯ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ಇದನ್ನು ಜಗನ್ ಶಕ್ತಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಕೇಪ್ ಆಫ಼್ ಗುಡ್ ಫ಼ಿಲ್ಮ್ಸ್, ಹೋಪ್ ಪ್ರೊಡಕ್ಷನ್ಸ್, ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್, ಅರುಣಾ ಭಾಟಿಯಾ ಮತ್ತು ಅನಿಲ್ ನಾಯ್ಡು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಸೊನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್, ಕೀರ್ತಿ ಕುಲ್ಹಾರಿ, ಶರ್ಮನ್ ಜೋಶಿ, ಎಚ್. ಜಿ. ದತ್ತಾತ್ರೇಯ ಮತ್ತು ವಿಕ್ರಮ್ ಗೋಖಲೆ ಇರುವ ಸಮೂಹ ಪಾತ್ರವರ್ಗವಿದೆ. ಈ ಚಿತ್ರವು ಭಾರತದ ಮೊದಲ ಅಂತರಗ್ರಹ ಪ್ರಯಾಣವಾದ ಮಾರ್ಸ್ ಆರ್ಬಿಟರ್ ಮಿಷನ್‍ಗೆ ಕೊಡುಗೆ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಜೀವನದ ಮೇಲೆ ಸ್ಥೂಲವಾಗಿ ಆಧಾರಿತವಾಗಿದೆ. ಮಿಷನ್ ಮಂಗಲ್ ಚಿತ್ರವನ್ನು ನವೆಂಬರ್ ೨೦೧೮ರಲ್ಲಿ ಘೋಷಿಸಲಾಯಿತು. ಪ್ಯಾಡ್ ಮ್ಯಾನ್ (೨೦೧೮) ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಶಕ್ತಿ ಚಿತ್ರಕಥೆಯನ್ನು ಕುಮಾರ್‌ರಿಗೆ ನಿರೂಪಿಸಿದರು. ಚಿತ್ರದ ಪ್ರಧಾನ ಛಾಯಾಗ್ರಹಣವು ನವೆಂಬರ್ ೨೦೧೮ರಲ್ಲಿ ಆರಂಭವಾಯಿತು. ಚಿತ್ರದ ಧ್ವನಿವಾಹಿನಿಯನ್ನು ಅಮಿತ್ ತ್ರಿವೇದಿ ಮತ್ತು ತನಿಷ್ಕ್ ಬಾಗ್ಚಿ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಬಾಗ್ಚಿ ಜೊತೆಗೆ ಅಮಿತಾಭ್ ಭಟ್ಟಾಚಾರ್ಯ ಬರೆದರು. ಧ್ವನಿವಾಹಿನಿಯನ್ನು ಜ಼ೀ ಮ್ಯೂಜ಼ಿಕ್ ಕಂಪನಿ ಲಾಂಛನದಡಿ ಬಿಡುಗಡೆ ಮಾಡಲಾಯಿತು. ಮಿಷನ್ ಮಂಗಲ್ ಚಿತ್ರವನ್ನು ಭಾರತದ ಸ್ವಾತಂತ್ರ್ಯ ದಿನಾಚರಣೆ ದಿನದಂದು ೧೫ ಆಗಸ್ಟ್ ೨೦೧೯ರಂದು ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ವಿಶ್ವಾದ್ಯಂತ ₹290.59 ಕೋಟಿಯಷ್ಟು ಹಣಗಳಿಸಿ ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು. == ಕಥಾವಸ್ತು == ೨೫ ಡಿಸೆಂಬರ್ ೨೦೧೦ರಂದು ಯೋಜನಾ ನಿರ್ದೇಶಕಿ ತಾರಾ ಶಿಂದೆಯವರ ಸಣ್ಣ ತಪ್ಪಿನ ಕಾರಣ ಜಿಎಸ್ಎಲ್‍ವಿ-ಎಫ಼್೦೬ ನ ವಿಫಲ ಉಡಾವಣೆಯ ನಂತರ, ಅವರೊಂದಿಗೆ ಕೆಲಸಮಾಡುವ ಜೊತೆಗಾರ ವಿಜ್ಞಾನಿಯಾದ ರಾಕೇಶ್ ಧವನ್ ಅವಳ ಪರವಾಗಿ ದೂಷಣೆಯನ್ನು ತೆಗೆದುಕೊಳ್ಳುತ್ತಾನೆ. ಪರಿಣಾಮವಾಗಿ ಶಿಕ್ಷೆಯಾಗಿ ಅವರನ್ನು ಮಂಗಳಯಾನದ ಮೇಲೆ ಕೆಲಸಮಾಡಲು ಸ್ಥಳಾಂತರಿಸಲಾಗುತ್ತದೆ. ಹೊಸ ಜಿಎಸ್ಎಲ್‍ವಿ ಕಾರ್ಯಾಚರಣೆಗಳನ್ನು ಭಾರತೀಯ ಮೂಲದ ನಾಸಾ ವಿಜ್ಞಾನಿಯಾದ ರೂಪರ್ಟ್ ದೇಸಾಯ್‍ಗೆ ನೀಡಲಾಗುತ್ತದೆ. ಅದರ ಮುಗ್ಗಟ್ಟಿನ ಬಂಡವಾಳದಿಂದ ಮಂಗಳ ಗ್ರಹವನ್ನು ತಲುಪುವ ಗುರಿಯ ಕಾರಣದಿಂದ ಅವನ ಸಹ ಕೆಲಸಗಾರರು ಮಾಮ್‍ನ್ನು (ಮಾರ್ಸ್ ಆರ್ಬಿಟರ್ ಮಿಷನ್) ಅಸಾಧ್ಯ ಕಾರ್ಯಾಚರಣೆಯೆಂದು ಭಾವಿಸಿರುತ್ತಾರೆ. ಲಭ್ಯವಿರುವ ತಂತ್ರಜ್ಞಾನದ ಒಯ್ಯಬಲ್ಲ ಭಾರವು ಕೇವಲ ೧೫೦೦ ಕೆ.ಜಿ ಯಷ್ಟಿದ್ದು ರಾಕೆಟ್‍ನ್ನು ಸುಮಾರು 5.5*10^7 ಕಿ.ಮಿ. ದೂರದಷ್ಟು ಸಾಗಿಸಲು ಇಂಧನವಿರದಿರುವುದರಿಂದ ಮಾಮ್ ಪಿಎಸ್ಎಲ್‍ವಿಯಲ್ಲಿ ಮೇಲೇರುವುದು ಸಾಧ್ಯವಿಲ್ಲ ಎಂದು ರಾಕೇಶ್‍ಗೆ ತಿಳಿಯುತ್ತದೆ. ಅದು ಯಶಸ್ವಿಯಾಗಿದ್ದರೆ ೨೩೦೦ ಕೆ.ಜಿ.ಯಷ್ಟು ಒಯ್ಯಬಲ್ಲ ತೂಕ ಹೊಂದಿರುವ ಜಿ.ಎಸ್.ಎಲ್.ವಿ ಉಪಗ್ರಹವನ್ನು ಮಂಗಳ ಗ್ರಹಕ್ಕೆ ಒಯ್ಯಬಹುದಾಗಿತ್ತು. ಆದರೆ, ಜಿಎಸ್ಎಲ್‍ವಿಯ ಇತ್ತೀಚಿನ ಗಮನಾರ್ಹ ವೈಫಲ್ಯಗಳು ಭವಿಷ್ಯದ ಯೋಜಿತ ಕಾರ್ಯಾಚರಣೆಗಳನ್ನು ಗಂಡಾಂತರಕ್ಕೆ ಒಳಪಡಿಸಿರುತ್ತದೆ. ಮನೆಗೆ ಮರಳಿದ ತಾರಾ ತನ್ನ ವೃತ್ತಿ ಮತ್ತು ಕುಟುಂಬವನ್ನು ಸರಿತೂಗಿಸುವುದರ ನಡುವೆ ಕೆಟ್ಟದಾಗಿ ಸಿಕ್ಕಿಕೊಂಡಿರುತ್ತಾಳೆ. ಮನೆಯಲ್ಲಿ ಒಂದು ದಿನ ಪೂರಿಗಳನ್ನು ಕರಿಯುವಾಗ, ಎಲ್ಲ ಪೂರಿಗಳನ್ನು ಕರಿಯಲು ಅನಿಲವು ಸಾಕಾಗುವುದಿಲ್ಲವೆಂದು ತಾರಾಳ ಮನೆಕೆಲಸದವಳು ಹೇಳುತ್ತಾಳೆ. ಎಣ್ಣೆಯನ್ನು ಕಾಯಿಸಿ ಒಲೆಯನ್ನು ನಿಲ್ಲಿಸಿಬಿಟ್ಟು ಮತ್ತೆ ಎಣ್ಣೆ ತಂಪಾದಾಗ ಒಲೆಯನ್ನು ಮತ್ತೆ ಹತ್ತಿಸಬೇಕು ಎಂದು ಇದಕ್ಕೆ ತಾರಾ ಹೇಳುತ್ತಾಳೆ. ಇದು ಅವಳಿಗೆ ಪಿಎಸ್ಎಲ್‍ವಿ ಬಳಸಿ ಮಾಮ್‍ನ್ನು ಉಡಾಯಿಸುವ ಕಲ್ಪನೆಯನ್ನು ನೀಡುತ್ತದೆ. ಮಾಮ್ ಉಪಗ್ರಹವನ್ನು ಭೂಮಿಯ ಹೊರ ಕಕ್ಷೆಯಲ್ಲಿ ಮತ್ತಷ್ಟು ತಳ್ಳಲು ಅನಿಲದ ಸ್ಫೋಟಗಳನ್ನು ಬಳಸಿ ನಂತರ ಭೂಮಿಯ ಗುರುತ್ವ ಗೋಳವನ್ನು ಬಳಸಿ ಅದನ್ನು ಶಕ್ತಿವತ್ತಾಗಿ ವೇಗಗೊಳಿಸಿ ಯಶಸ್ವಿಯಾಗಿ ಇಂಧನವನ್ನು ಉಳಿಸುವುದು ಯೋಜನೆಯಾಗಿರುತ್ತದೆ. ಅವಳು ಈ ಯೋಜನೆಯೊಂದಿಗೆ ರಾಕೇಶ್ ಬಳಿ ಹೋದಾಗ ಅವನಿಗೆ ಮನವರಿಕೆಯಾಗುತ್ತದೆ. ಇಬ್ಬರೂ ತಂಡದ ಇತರ ಸದಸ್ಯರ ಬೆಂಬಲ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಬದಲಾಗಿ ಅವರನ್ನು ಅಣಕಿಸಲಾಗುತ್ತದೆ. ಆದರೆ ನಂತರ ಇಸ್ರೊದ ನಿರ್ದೇಶಕರ ಜೊತೆಗೆ ಅವರಿಗೂ ಮನವರಿಕೆಯಾಗುತ್ತದೆ. ರೂಪರ್ಟ್‌ಗೆ ಅವರ ತಂಡದ ತಜ್ಞ ಸದಸ್ಯರನ್ನು ನೀಡುವಂತೆ ತಾರಾ ಮತ್ತು ರಾಕೇಶ್ ಕೇಳಿಕೊಂಡಾಗ, ರೂಪರ್ಟ್ ಬದಲಾಗಿ ಮಿಷನ್ ಉಡಾವಣೆಗಳಲ್ಲಿ ಕಡಿಮೆ ಅಥವಾ ಸ್ವಲ್ಪವೂ ಅನುಭವವಿಲ್ಲದ ಕಿರಿಯ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳನ್ನು ನೀಡುತ್ತಾರೆ. ಮೊದಲನೆಯವಳಾದ ನೋದನ ನಿಯಂತ್ರಣ ತಜ್ಞೆ ಏಕಾ ಗಾಂಧಿ ಬಹುತೇಕ ಭಾರತೀಯ ವಸ್ತುಗಳನ್ನು ದ್ವೇಷಿಸುವ ಒಬ್ಬ ಯುವತಿಯಾಗಿದ್ದು ನಾಸಾಕ್ಕೆ ಹೊರಟು ಹೋಗಲು ಯಾವುದೇ ಅವಕಾಶಕ್ಕಾಗಿ ಕಾಯುತ್ತಿರುತ್ತಾಳೆ. ಮತ್ತೊಬ್ಬಳಾದ ಗಗನ ನೌಕಾ ಸ್ವಾಯತ್ತತಾ ವಿನ್ಯಾಸಕಿ ನೇಹಾ ಸಿದ್ದೀಕಿ ತನ್ನ ಅಂತರಕೋಮು ಹಿನ್ನೆಲೆಯ ಪರಿಣಾಮವಾಗಿ ತಿರಸ್ಕರಣೆಯಿಂದ ಹೆಣಗಾಡುತ್ತಿರುತ್ತಾಳೆ. ಸಂಚರಣಾ ತಜ್ಞೆ ಕೃತ್ತಿಕಾ ಅಗರ್ವಾಲ್ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡ ಮಾಜಿ ಯೋಧನಾಗಿದ್ದ ತನ್ನ ಗಂಡ ರಿಶಿ ಅಗರ್ವಾಲ್‍ನ ಆರೈಕೆ ಮಾಡುತ್ತಿರುವ ಶ್ರದ್ಧಾಭರಿತ ಪತ್ನಿಯಾಗಿರುತ್ತಾಳೆ. ಉಪಗ್ರಹ ವಿನ್ಯಾಸಕಿ ಮತ್ತು ಭಾರ ತಜ್ಞೆಯಾದ ವರ್ಷಾ ಪಿಳ್ಳೈ ಒಂದು ಮಗುವನ್ನು ಹೆರಲು ಸಾಧ್ಯವಾಗದಿರುವುದಕ್ಕೆ ತನ್ನ ಅತ್ತೆಯ ಮೂದಲಿಕೆಗಳೊಂದಿಗೆ ಹೋರಾಡುತ್ತಿರುತ್ತಾಳೆ. ಭಾರ ತಜ್ಞನಾದ ಪರ್‌ಮೇಶ್ವರ್ ಜೋಶಿ ಹೆಚ್ಚಾಗಿ ಪೂಜಾರಿ ಮತ್ತು ಅವನ ಸಲಹೆಯ ಮೇಲ ಅವಲಂಬಿಸಿರುತ್ತಾನೆ ಮತ್ತು ಏಕಾಳಲ್ಲಿ ಪ್ರಣಯಾಸಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ. ಕೊನೆಯದಾಗಿ, ಅನಂತ್ ಐಯಂಗಾರ್ ತಂಡದ ರಾಚನಿಕ ಇಂಜಿನಿಯರ್ ಆಗಿರುತ್ತಾನೆ. ಆದರೆ, ಭಾರತದ ಎರಡನೇ ಚಂದ್ರ ಸಂಬಂಧಿ ಕಾರ್ಯಾಚರಣೆಯಾದ ಚಂದ್ರಯಾನ-೨ರ ಘೋಷಣೆಯ ನಂತರ ಕಾರ್ಯಾಚರಣೆಯ ಬಂಡವಾಳವನ್ನು 50% ನಷ್ಟು ಕಡಿತಗೊಳಿಸಲಾಗುತ್ತದೆ. ಬಿಗಿ ವೇಳಾಪಟ್ಟಿ ಮತ್ತು ಅತ್ಯಲ್ಪ ಬಂಡವಾಳದ ನಡುವೆ, ತಾರಾ ಮತ್ತು ರಾಕೇಶ್ ಹಲವಾರು ರಾಜಿಗಳನ್ನು ಮಾಡಿಕೊಂಡು ತಮ್ಮ ಮಾಮ್ ಯೋಜನೆಯ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ. ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಿರಿಯ ವಿಜ್ಞಾನಿಗಳಲ್ಲಿ ಈ ಕಾರ್ಯಾಚರಣೆಯನ್ನು ಸಾಧ್ಯವಾಗಿಸಲು ಬೇಕಾದ ಮನೋಸ್ಥೈರ್ಯ ಮತ್ತು ಪ್ರೇರಣೆ ಕಡಿಮೆಯಿದೆ ಎಂದು ತಾರಾ ಮತ್ತು ರಾಕೇಶ್‍ಗೆ ಅರಿವಾಗುತ್ತದೆ. ಪರಿಣಾಮವಾಗಿ ತಂಡವು ನಿಧಾನವಾಗಿ ಸಾಗಿರುತ್ತದೆ. ತಮ್ಮ ಬಂಡವಾಳ ಮತ್ತು ವೇಳಾಪಟ್ಟಿಯನ್ನು ಸಾಧಿಸಲು ತಾನು ತಂಡದ ಸದಸ್ಯರು ತಮ್ಮ ಮನೋಭಾವಗಳನ್ನು ಬದಲಾಯಿಸುವಂತೆ ಮಾಡಬೇಕು, ಮತ್ತು ತಮ್ಮ ಕನಸಿನ ವೃತ್ತಿಗಳನ್ನು ವಾಸ್ತವವಾಗಿ ಮಾರ್ಪಡಿಸುವಲ್ಲಿ ಅವರಿಗೆ ಸ್ಫೂರ್ತಿ ನೀಡಬೇಕು ಎಂದು ತಾರಾಗೆ ಬೇಗನೇ ಅರಿವಾಗುತ್ತದೆ. ಅವಳು ಇದರಲ್ಲಿ ಯಶಸ್ವಿಯಾಗುತ್ತಾಳೆ. ತಂಡವು ಕಾರ್ಯಾಚರಣಾ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಅದನ್ನು ಸಾಧ್ಯವಾಗಿಸಲು ತಮ್ಮ ಎಲ್ಲ ಕಠಿನ ಪರಿಶ್ರಮ ಮತ್ತು ಶಕ್ತಿಯನ್ನು ಹಾಕುತ್ತದೆ. ಅಂತಿಮವಾಗಿ ಮಾಮ್ ಉಪಗ್ರಹವನ್ನು ಪಿಎಸ್ಎಲ್‍ವಿಯಲ್ಲಿ ೫ ನವೆಂಬರ್ ೨೦೧೩ರಂದು (ಹವಾಮಾನದ ಕಾರಣ ೮ ದಿನಗಳ ವಿಳಂಬದ ನಂತರ) ಉಡಾವಣೆ ಮಾಡಲಾಗುತ್ತದೆ. ಇದನ್ನು ಮಂಗಳಯಾನವೆಂದು ಹೆಸರಿಸಲಾಗುತ್ತದೆ ಮತ್ತು ಭೂಮಿಯ ಕಕ್ಷೆಯಲ್ಲಿ ಯಶಸ್ವಿಯಾಗಿ ಸೇರಿಸಲಾಗುತ್ತದೆ. ರಾಕೇಶ್ ಮತ್ತು ತಂಡವು ಯಶಸ್ವಿ ಉಡಾವಣೆಯನ್ನು ಆಚರಿಸುತ್ತದೆ. ಆದರೆ, ಆರನೇ ಕಕ್ಷೆ ಏರಿಕೆ ಕಾರ್ಯಾಚರಣೆಯನ್ನು ಮಾಡುವಾಗ, ಜೆಟ್‍ಗಳು ಉಡಾವಣೆ ಆಗುವಲ್ಲಿ ವಿಫಲವಾಗಿ ಮಿಷನ್ ಆರು ದಿನ ಹಿಂದೆ ದೂಡಲ್ಪಡುತ್ತದೆ. ರೂಪರ್ಟ್ ತಂಡವನ್ನು ಅಣಕಿಸುತ್ತಾನೆ. ಆದರೆ ಏನಾದರೂ ಆಗುವುದು ಎಂದು ತಾರಾ ಭರವಸೆ ಇಟ್ಟುಕೊಳ್ಳುವುದನ್ನು ಮುಂದುವರಿಸುತ್ತಾಳೆ. ಕೆಲವು ತಿಂಗಳ ನಂತರ ಮಂಗಳ ಗ್ರಹದ ಹಾದಿಯಲ್ಲಿ, ಉಪಗ್ರಹಕ್ಕೆ ಸೌರ ವಿಕಿರಣ ಅಲೆಯೊಂದು ಹೊಡೆದು ಉಪಗ್ರಹದ ಸಂವಹನ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ತಂಡವು ಸಂಪರ್ಕವನ್ನು ಸಾಧಿಸಲು ಯಶಸ್ವಿಯಾದಾಗ, ಸೌರ ವಿಕಿರಣವು ಉಪಗ್ರಹದ ವೇಗವನ್ನು ಹೆಚ್ಚಿಸಿ ಅದನ್ನು ಮುಂದಕ್ಕೆ ನೂಕಿ ಭೂಮಿಯ ಕಕ್ಷೆಯಲ್ಲಿ ಕಕ್ಷೀಯ ಕಾರ್ಯಾಚರಣೆಗಳನ್ನು ಮಾಡುವಾಗ ಆಗಿದ್ದ ೬ ದಿನಗಳ ಅಂತರವನ್ನು ಸರಿಪಡಿಸಿದೆ ಎಂದು ಅವರಿಗೆ ಅರಿವಾಗುತ್ತದೆ. ಮಂಗಳ ಗ್ರಹದ ಪ್ರಯಾಣದ ೨೯೮ ದಿನಗಳನ್ನು ಕಳೆದ ಮೇಲೆ, ಮಾಮ್ ಉಪಗ್ರಹವನ್ನು ಮಂಗಳದ ಕಕ್ಷೆಯಲ್ಲಿ ೨೪ ಸೆಪ್ಟೆಂಬರ್ ೨೦೧೪ರಂದು ಸೇರಿಸಲಾಗುತ್ತದೆ. ಭಾರತವು ಹೀಗೆ ಮಾಡಿದ ವಿಶ್ವದಲ್ಲಿನ ನಾಲ್ಕನೇ ದೇಶವಾಗುತ್ತದೆ ಮತ್ತು ಮೊದಲ ಯತ್ನದಲ್ಲೇ ಯಶಸ್ವಿಯಾದ ಮೊದಲ ದೇಶವಾಗುತ್ತದೆ. == ಪಾತ್ರವರ್ಗ == == ತಯಾರಿಕೆ == ೫ ನವೆಂಬರ್ ೨೦೧೮ರಂದು ಮಿಷನ್ ಮಂಗಲ್ ಚಿತ್ರವನ್ನು ಘೋಷಿಸಲಾಯಿತು. ಚಿತ್ರದ ಪ್ರಧಾನ ಛಾಯಾಗ್ರಹಣವು ನವೆಂಬರ್ ಮಧ್ಯಭಾಗದಲ್ಲಿ ಆರಂಭವಾಯಿತು. ಫ಼ೆಬ್ರುವರಿ ಮಧ್ಯ ಭಾಗದಲ್ಲಿ, ಪನ್ನು ಚಿತ್ರೀಕರಣದ ತಮ್ಮ ವೇಳಾಪಟ್ಟಿಯನ್ನು ಮುಗಿಸಿದರು. ನವೆಂಬರ್ ೨೦೧೮ರಂದು ಚಿತ್ರ ತಯಾರಕಿ ರಾಧಾ ಭಾರದ್ವಾಜ್ ಈ ಚಿತ್ರದ ತಯಾರಕರ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯನ್ನು ದಾಖಲಿಸಿದರು. == ಧ್ವನಿವಾಹಿನಿ == ಚಿತ್ರದ ಸಂಗೀತವನ್ನು ಅಮಿತ್ ತ್ರಿವೇದಿ ಸಂಯೋಜಿಸಿದರೆ ಹಾಡುಗಳಿಗೆ ಸಾಹಿತ್ಯವನ್ನು ಅಮಿತಾಭ್ ಭಟ್ಟಾಚಾರ್ಯ ಬರೆದರು. ಅತಿಥಿ ಸಂಯೋಜಕರಾಗಿ ಸೇರಿಕೊಂಡ ತನಿಷ್ಕ್ ಬಾಗ್ಚಿ ಒಂದು ಪ್ರಚಾರ ಹಾಡಾದ "ತೋತಾ ಉಡ್"ನ್ನು ಬರೆದು ಸಂಯೋಜಿಸಿದರು. == ಮಾರಾಟಗಾರಿಕೆ ಮತ್ತು ಬಿಡುಗಡೆ == |ನವ ದೆಹಲಿಯಲ್ಲಿನ ಒಂದು ಮಲ್ಟಿಪ್ಲೇಕ್ಸ್‌ನ ಹೊರಗೆ ಮಿಷನ್ ಮಂಗಲ್‍ನ ಪ್ರಚಾರ ೪ ಜುಲೈ ೨೦೧೯ರಂದು, ಕುಮಾರ್ ಚಿತ್ರದ ಮೊದಲ ನೋಟದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ಅಧಿಕೃತ ಟೀಜ಼ರ್‌ನ್ನು ೯ ಜುಲೈ ೨೦೧೯ರಂದು ಬಿಡುಗಡೆ ಮಾಡಿತು. ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ಮೊದಲ ಅಧಿಕೃತ ಟ್ರೇಲರ್‌ನ್ನು ೧೮ ಜುಲೈ ೨೦೧೯ರಂದು ಬಿಡುಗಡೆ ಮಾಡಿತು. ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ಎರಡನೇ ಅಧಿಕೃತ ಟ್ರೇಲರ್‌ನ್ನು ೮ ಆಗಸ್ಟ್ ೨೦೧೯ರಂದು ಬಿಡುಗಡೆ ಮಾಡಿತು. ಚಿತ್ರವು ೧೫ ಆಗಸ್ಟ್ ೨೦೧೯ರಂದು ಬಿಡುಗಡೆಯಾಯಿತು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಮಿಷನ್ ಮಂಗಲ್ ವಿಮರ್ಶಕರಿಂದ ಬಹುಮಟ್ಟಿಗೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. === ಬಾಕ್ಸ್ ಆಫ಼ಿಸ್ === ೧೨ ಅಕ್ಟೋಬರ್ ೨೦೧೯ರ ವೇಳೆಗೆ, ಭಾರತದಲ್ಲಿ ₹238.80 ಕೋಟಿ ಮತ್ತು ವಿದೇಶದಲ್ಲಿ ₹51.79 ಕೋಟಿ ಗಳಿಕೆಯೊಂದಿಗೆ ಈ ಚಿತ್ರವು ವಿಶ್ವಾದ್ಯಂತ ₹290.59 ಕೋಟಿಯಷ್ಟು ಹಣಗಳಿಸಿದೆ ಮತ್ತು ೨೦೧೯ ಆರನೇ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವೆನಿಸಿಕೊಂಡಿದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಮಿಷನ್ ಮಂಗಲ್ @ ಐ ಎಮ್ ಡಿ ಬಿ ಮಿಷನ್ ಮಂಗಲ್